ಹುಬ್ಬಳ್ಳಿ : ಖ್ಯಾತ ಹಿನ್ನಲೆ ಗಾಯಕ ಸೋನು ನಿಗಮ್ ಅವರು ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಸಿದ್ದಾರೂಢ ಶ್ರೀ ಹಾಗೂ ಗುರುನಾಥ ರೂಢ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಂಡರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಆಯೋಜಿಸಿದ್ದ ಗಾಳಿಪಟ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಇಂದು ಬೆಳಗ್ಗೆ ಸಿದ್ದಾರೂಢರ ಮಠಕ್ಕೆ ಬೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಕೆ ಮಾಡಿದರು.
ಇದೇ ವೇಳೆ, ಸಿದ್ದಾರೂಢ ಗದ್ದುಗೆ ಬಳಿ ಹತ್ತು ನಿಮಿಷಗಳವರೆಗೆ ಧ್ಯಾನ ಮಾಡಿದರು. ಸೋನು ನಿಗಮ್ ಅವರಿಗೆ ಸಿದ್ದಾರೂಢ ಮಠದ ಟ್ರಸ್ಟ್ನಿಂದ ಸಿದ್ದಾರೂಢ ಮೂರ್ತಿ ನೀಡಿ ಸತ್ಕರಿಸಲಾಯಿತು.
ಕಳೆದ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಅನಿಸುತ್ತದೆ : 'ನಾನು ಹಿಂದಿ ಭಾಷಿಕನಾದರೂ ಕಳೆದ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಅನಿಸುತ್ತದೆ. ಆ ಕಾರಣಕ್ಕೋ ಏನೋ, ಕನ್ನಡ ಹಾಡುಗಳನ್ನು ಹಾಡುವಾಗ ಸಾಹಿತ್ಯದ ಭಾವನೆಗಳು ನನ್ನಲ್ಲಿ ತಾನಾಗಿಯೇ ಸ್ಫುರಿಸುತ್ತವೆ' ಎಂದು ಬಹುಭಾಷಾ ಗಾಯಕ ಸೋನು ನಿಗಮ್ ಇತ್ತೀಚಿಗೆ ಭಾವುಕರಾಗಿ ನುಡಿದಿದ್ದರು.
ಕಾರವಾರ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ 'ಮಯೂರ ವರ್ಮ' ವೇದಿಕೆಯಲ್ಲಿ ನಡೆದ ಕರಾವಳಿ ಉತ್ಸವ ಸಪ್ತಾಹದ ಮೂರನೇ ದಿನದ ಪ್ರಮುಖ ಆಕರ್ಷಣೆಯಾಗಿದ್ದ ಸೋನು ನಿಗಮ್, ತಮ್ಮ ಕಂಠಸಿರಿಯಿಂದ ಸಾವಿರಾರು ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದರು.
ಇದನ್ನೂ ಓದಿ : 'ಕಳೆದ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಅನ್ಸುತ್ತೆ': ಕಾರವಾರದ ಕಡಲತೀರದಲ್ಲಿ ಸೋನು ನಿಗಮ್ ಗಾನಲಹರಿ