ತುಮಕೂರು: ತುಮಕೂರು ನಗರ ವ್ಯಾಪ್ತಿಯ ರಾಜಕಾಲುವೆಗಳಿಗೆ ಕಾರ್ಖಾನೆಗಳ ಕೆಮಿಕಲ್ ತ್ಯಾಜ್ಯವನ್ನು ಹರಿಸುತ್ತಿದ್ದ ಎರಡು ಟ್ಯಾಂಕರ್ಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕಾರ್ಖಾನೆಗಳ ಕೆಮಿಕಲ್ ತ್ಯಾಜ್ಯವನ್ನು ರಾಜಕಾಲುವೆಗೆ ಸುರಿಯುತ್ತಿದ್ದರಿಂದ ಸುತ್ತಮುತ್ತಲಿನ ಪರಿಸರ ಕಲುಷಿತಗೊಂಡಿದೆ. ಈ ಬಗ್ಗೆ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವೀರ ಸಾಗರ ಗ್ರಾಮದಲ್ಲಿ ಎರಡು ಟ್ಯಾಂಕರ್ಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಟ್ಯಾಂಕರ್ ಗಳನ್ನು ಜಪ್ತಿ ಮಾಡಿ ಮಹಾನಗರ ಪಾಲಿಕೆ ಆವರಣದಲ್ಲಿ ನಿಲ್ಲಿಸಲಾಗಿದೆ. ಇನ್ನು ಸ್ಥಳದಲ್ಲಿ ಟ್ಯಾಂಕರ್ ಚಾಲಕರು ವಾಹನ ಜಪ್ತಿಯಾಗುತ್ತಿದ್ದಂತೆ ಪರಾರಿಯಾಗಿದ್ದಾರೆ.
ಒಂದು ವಾರದ ಹಿಂದೆ ಸಾರ್ವಜನಿಕರೊಬ್ಬರು ದೂರು ದಾಖಲಿಸಿದ್ದರು. ಈ ಮಾಹಿತಿ ಮೇರೆಗೆ ಒಂದು ಚೆಕ್ಕಿಂಗ್ ಟೀಮ್ನ್ನು ಇಟ್ಟಿದ್ದೆವು. 2-3 ರಾತ್ರಿ ನಮಗೆ ಯಾವುದೇ ಚಟುವಟಿಕೆ ಕಂಡು ಬರಲಿಲ್ಲ. ಆದರೆ, ನಿನ್ನೆ ಆ ಸ್ಥಳದಲ್ಲಿ ನಮ್ಮ ಟೀಂ ಇದ್ದು ಕಾರ್ಯಾಚರಣೆ ನಡೆಸಿದೆ. ಟ್ಯಾಂಕರ್ ವಾಹನದಲ್ಲಿ ಫಾರ್ಮಸಿಟಿಕಲ್ ಕಂಪನಿಯೊಂದರ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲಾಗುವುದು. ಅಲ್ಲದೆ ಈಗಾಗಲೇ ಒಂದು ಟ್ಯಾಂಕರ್ನಲ್ಲಿದ್ದ 500 ಲೀಟರ್ನಷ್ಟು ಕೆಮಿಕಲ್ ತ್ಯಾಜ್ಯವನ್ನು ಸುರಿದಿದ್ದಾರೆ ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶುಭ ತಿಳಿಸಿದ್ದಾರೆ.
ಇದನ್ನೂ ಓದಿ: ಉಡುಪಿ: ಭಾರತದ ನೌಕಾಸೇನೆ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ; ಐದನೇ ಆರೋಪಿ ಬಂಧನ