ಹಾಸನ: ಬೇಲೂರು ತಾಲೂಕು ಅರೇಹಳಗಳಿ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಚಲನವಲನ ಸ್ಥಳೀಯ ನಿವಾಸಿಗಳಲ್ಲಿ ಭಯದ ವಾತಾವರಣವನ್ನು ಉಂಟುಮಾಡಿದೆ.
ಭಾನುವಾರ ಇಡೀ ರಾತ್ರಿ ಆಹಾರಕ್ಕಾಗಿ ಅಲೆದಾಡಿದ್ದ ಸುಮಾರು 28 ಕಾಡಾನೆಗಳ ಹಿಂಡು ಬೆಳಗ್ಗೆ ಕಾಫಿ ತೋಟದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದವು. ಈ ಸಂದರ್ಭದಲ್ಲಿ ಗೌರಿ ಕೆರೆಯಲ್ಲಿ ಸಾಕಷ್ಟು ನೀರು ಕುಡಿಯುವುದರ ಮೂಲಕ ದಾಹ ನೀಗಿಸಿಕೊಂಡು ಮತ್ತದೇ ತೋಟಕ್ಕೆ ವಿಶ್ರಾಂತಿಗೆ ತೆರಳಿದವು. ಇನ್ನೊಂದು ಒಂಟಿ ಕಾಡಾನೆಯು ಕಿತ್ತಾವರ ಎಸ್ಟೇಟ್ನ ಬಿ ಬ್ಲಾಕ್ನಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಇಟಿಎಫ್ ಸಿಬ್ಬಂದಿಗಳು ಕಾಡಾನೆಗಳ ಸಂಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆಯಿಂದಿರುವಂತೆ ತಿಳಿಸುತ್ತಿದ್ದಾರೆ. ಜತೆಗೆ ಆನೆಗಳು ಓಡಾಡಬಹುದಾಗಿರುವ ಸ್ಥಳದಲ್ಲಿ ರಾತ್ರಿ ಸಂಚಾರನ್ನು ಮಾಡಬಾರದೆಂದು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಮುತ್ತೋಡಿ ಅಭಯಾರಣ್ಯದಲ್ಲಿ ದೈತ್ಯಾಕಾರದ ದಂತದ ಆನೆ ಪ್ರತ್ಯಕ್ಷ
ಚಿಕ್ಕಮಗಳೂರು ಮುತ್ತೋಡಿ ಅಭಯಾರಣ್ಯದ ಮಧ್ಯೆ ಇರುವ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕೆಸವೆ ಬಳಿ ಇರುವ ಅರಣ್ಯ ವಿಶ್ರಾಂತಿ ಗೃಹದ ಬಳಿ ದೈತ್ಯ ದಂತದ ಕಾಡಾನೆಯೊಂದು ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಈ ಆನೆ ಕಂಡ ಜನತೆ ಅದರ ಗಾತ್ರ ನೋಡಿಯೇ ಬೆಚ್ಚಿಬಿದ್ದಿದ್ದಾರೆ.