ವಿಜಯನಗರ: ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವ ಮಂಗಳವಾರ ಸಂಜೆ ಸಹಸ್ರಾಸು ಭಕ್ತರ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಅರ್ಚಕರ ತಂಡ ಸ್ವಾಮಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ದೇವಸ್ಥಾನದ ಆವರಣದಲ್ಲಿ ಹೋಮ-ಹವನ ಹಾಗೂ ವಿವಿಧ ಪೂಜಾ ವಿಧಿಗಳು ಸ್ವಾಮೀಜಿಯ ನೇತೃತ್ವದಲ್ಲಿ ಜರುಗಿತು. ಪೀಠದ ಪರಂಪರೆಯಂತೆ ಭಾವೈಕ್ಯತೆಯ ಪ್ರತೀಕವಾಗಿ ಪೀಠಾಧೀಶ ಸಿದ್ಧಲಿಂಗ ಶಿವಾಚಾರ್ಯರು ಭಕ್ತರೊಂದಿಗೆ ಗ್ರಾಮದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ, ಬಳಿಕ ದರ್ಗಾಕ್ಕೂ ಭೇಟಿ ನೀಡಿ ಸಾಮರಸ್ಯದ ಸಂದೇಶ ಸಾರಿದರು.
ಸಂಜೆ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಮಂಗಳವಾದ್ಯದೊಂದಿಗೆ ತೇರುಬಯಲಿಗೆ ತರಲಾಯಿತು. ಪಲ್ಲಕ್ಕಿ ಉತ್ಸವ ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ, ಅರ್ಚಕರು ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದರು.
ಇದಾದ ಬಳಿಕ ಭಕ್ತರು 'ಮರುಳಸಿದ್ದೇಶ್ವರ ಮಹಾರಾಜರಿಗೆ ಜೈ' ಎಂದು ಘೋಷಣೆ ಕೂಗುತ್ತಾ ಭಕ್ತಿಭಾವದಿಂದ ರಥ ಎಳೆಯಲು ಪ್ರಾರಂಭಿಸಿದರು. ತೇರಿನ ಚಕ್ರಗಳಿಗೆ ತೆಂಗಿನಕಾಯಿ ಒಡೆದು, ಬಾಳೆಹಣ್ಣು, ಉತ್ತತ್ತಿ ಹಾಗೂ ದವನ ಸಮರ್ಪಿಸಿದರು.
ರಥ ಪಾದಗಟ್ಟೆ ತಲುಪಿ ಗೋದೂಳಿ ಮುಹೂರ್ತದಲ್ಲಿ ಮೂಲಸ್ಥಾನಕ್ಕೆ ಮರಳುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ರಾಜ್ಯ, ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು.
ಇದನ್ನೂ ಓದಿ: ದಾಸಯ್ಯನ ಕುಣಿತ: ಹೆಣ್ಣು ಮಕ್ಕಳ ವೇಷ, ನಕ್ಕು ನಗಿಸುವ ಯುವಕರು- ವಿಡಿಯೋ - DASAYYANA KUNITHA