ಮೈಸೂರು : ಬದುಕಿರುವ ವ್ಯಕ್ತಿಗೆ ನಗರ ಪಾಲಿಕೆಯಿಂದ ಮರಣ ಪತ್ರ ನೀಡಲಾಗಿದೆ ಎಂದು ಆರೋಪಿಸಿ, ಕರ್ನಾಟಕ ರೈತ ಸಂಘದ ರೈತರು ನಗರ ಪಾಲಿಕೆ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ರೈತ ಮುಖಂಡ ವಿದ್ಯಾಸಾಗರ್ ಮಾತನಾಡಿ, ಗುಂಡ್ಲುಪೇಟೆ ತಾಲೂಕಿನ ಹೊರೆಯಾಲ ಗ್ರಾಮದ ಗುರುಸ್ವಾಮಿ ಅವರ ತಂದೆ ಶಿವಣ್ಣಾಚಾರಿ 2021ರಲ್ಲಿ ಸಾಲದ ಹೊರೆಯಿಂದ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ತಂದೆಯ ಹೆಸರಿನಲ್ಲಿ ಮರಣಪತ್ರವನ್ನು ನೀಡದ ನಗರ ಪಾಲಿಕೆ ಅಧಿಕಾರಿಗಳು, ಮಗ ಗುರುಸ್ವಾಮಿ ಅವರ ಹೆಸರಿಗೆ ಮರಣಪತ್ರ ನೀಡಿದ್ದಾರೆ. ಅದನ್ನು ಸರಿಪಡಿಸಲು ನಾಲ್ಕೈದು ವರ್ಷಗಳಿಂದ ಅಲೆದಾಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುರುಸ್ವಾಮಿ ಅವರಿಗೆ ರೇಷನ್, ಆಧಾರ್ ಕಾರ್ಡ್ ಇಲ್ಲದಂತಾಗಿದೆ. ಜೊತೆಯಲ್ಲಿ ಮತದಾನದ ಹಕ್ಕಿಲ್ಲ. ಬ್ಯಾಂಕ್ನಲ್ಲಿ ಸಾಲ ತೆಗೆದುಕೊಳ್ಳಲೂ ಆಗುತ್ತಿಲ್ಲ. ಸರಿಪಡಿಸುವಂತೆ ಮನವಿ ಕೊಟ್ಟರೆ ಸರ್ವರ್ ಸಮಸ್ಯೆಯೆಂದು ನೆಪ ಹೇಳುತ್ತಿದ್ದಾರೆ. ಈತರ ಅವಾಂತರ ಸೃಷ್ಟಿ ಮಾಡಿದ ಅಧಿಕಾರಿಯನ್ನು ಸೇವೆಯಿಂದ ಮನೆಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಗುರುಸ್ವಾಮಿ ಹಾಗೂ ಕುಟುಂಬಸ್ಥರು, ರೈತ ಮುಖಂಡರು ಇದ್ದರು.
ಇದನ್ನೂ ಓದಿ : ಬೆಲೆ ಕುಸಿತ: ನಡುರಸ್ತೆಗೆ ಮಾವು ಸುರಿದು ಕೋಲಾರ ರೈತರ ಆಕ್ರೋಶ - MANGO FARMERS PROTEST