ಪುರಿ(ಒಡಿಶಾ): ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪ ಸಂತ್ರಸ್ತರಿಗೆ ಅಂತಾರಾಷ್ಟ್ರೀಯ ಮರಳು ಕಲಾವಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರು ಸಂತಾಪ ಸೂಚಿಸಿದ್ದಾರೆ.
ಪುರಿಯ ನೀಲಾದ್ರಿ ಕಡಲತೀರದಲ್ಲಿ 6 ಅಡಿ ಎತ್ತರದ ಮರಳು ಶಿಲ್ಪವನ್ನು ರಚಿಸಿದ್ದಾರೆ. ಈ ಮರಳು ಶಿಲ್ಪ "ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಿ" ಎಂಬ ಹೃದಯಸ್ಪರ್ಶಿ ಸಂದೇಶ ಹೊಂದಿದೆ. ಈ ಮೂಲಕ, ಕಲಾವಿದ ಭೂಕಂಪದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲೆಂದು ಹಾರೈಸಿದ್ದಾರೆ.
ಜಾಗತಿಕ ಸಹೋದರತ್ವ ಮತ್ತು ಮಾನವೀಯತೆಯ ಸಂದೇಶ ಹೊಂದಿರುವ ಈ ಮರಳು ಶಿಲ್ಪವನ್ನು ಸುದರ್ಶನ್ ಅವರು ಮರಳು ಕಲಾ ಸಂಸ್ಥೆಯ ವಿದ್ಯಾರ್ಥಿಗಳ ಸಹಾಯದಿಂದ ಸಿದ್ಧಪಡಿಸಿದ್ದಾರೆ.
ಸುದರ್ಶನ್ ಪಟ್ನಾಯಕ್ ಅವರು ಮಾತನಾಡಿ, "ಇಂತಹ ಕಠಿಣ ಸಮಯದಲ್ಲಿ ವೆನೆಜುವೆಲಾದ ಜನರಿಗೆ ನನ್ನ ಪ್ರಾರ್ಥನೆಗಳು. ಈ ಮರಳು ಕಲೆಯ ಮೂಲಕ ನಾನು ದುಃಖಿತರು ಮತ್ತು ಅವರ ಕುಟುಂಬಗಳಿಗೆ ಸಹಾನುಭೂತಿ ಮತ್ತು ಬೆಂಬಲವನ್ನು ನೀಡುತ್ತಿದ್ದೇನೆ. ದೇವರು ಅವರಿಗೆ ಈ ದುಃಖ ಸಹಿಸಿಕೊಳ್ಳುವ ತಾಳ್ಮೆ ಮತ್ತು ಶಕ್ತಿ ನೀಡಲಿ" ಎಂದು ಹೇಳಿದರು.
ಸುದರ್ಶನ್ ಪಟ್ನಾಯಕ್ ಅವರು ತಮ್ಮ ಕಲೆಯ ಮೂಲಕ ಜಾಗತಿಕ ಮಾನವೀಯ, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಇದರ ಜತೆಗೆ ವಿಶ್ವದಾದ್ಯಂತ 65ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮರಳು ಕಲಾ ಸ್ಪರ್ಧೆಗಳು ಮತ್ತು ಉತ್ಸವಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ: ವೆನೆಜುವೆಲಾ ಭೂಕಂಪ - ಸಾವಿನ ಸಂಖ್ಯೆ 235ಕ್ಕೆ ಏರಿಕೆ: 4300ಕ್ಕೂ ಹೆಚ್ಚು ಮಂದಿಗೆ ಗಾಯ: ಮುಂದುವರಿದ ರಕ್ಷಣಾ ಕಾರ್ಯಾಚರಣೆ