ಧಾರವಾಡ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ ಅವರನ್ನು ಕೊಲೆಗೈದ ಫಯಾಜ್ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಐದನೇ ಬಾರಿಗೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾಗೊಳಿಸಿದೆ.
ಈ ಹಿಂದೆ ಹುಬ್ಬಳ್ಳಿ ನ್ಯಾಯಾಲಯದಲ್ಲಿ ಫಯಾಜ್ ಸಲ್ಲಿಸಿದ್ದ ಎರಡು ಜಾಮೀನು ಅರ್ಜಿಗಳು ತಿರಸ್ಕೃತವಾಗಿದ್ದವು. ಬಳಿಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಅಲ್ಲಿ ಜಾಮೀನು ಸಿಗುವುದಿಲ್ಲ ಎಂಬುದನ್ನರಿತು ಎರಡು ಬಾರಿ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡಿದ್ದ.
ಆದ್ರೆ ಮತ್ತೊಮ್ಮೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಇದೀಗ ಧಾರವಾಡ ಹೈಕೋರ್ಟ್ನಲ್ಲಿಯೂ ಸಹ ಆತನ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ, ಫಯಾಜ್ನ ಒಟ್ಟು ಐದು ಜಾಮೀನು ಅರ್ಜಿಗಳು ನ್ಯಾಯಾಲಯಗಳಿಂದ ತಿರಸ್ಕೃತಗೊಂಡಂತಾಗಿವೆ.
ಪ್ರಕರಣದಲ್ಲಿ ನೇಹಾ ಹಿರೇಮಠ ಪರ ವಕೀಲ ರಾಘವೇಂದ್ರ ಮುತ್ತಗಿಕರ ವಾದ ಮಂಡಿಸಿದ್ದು, ಸರ್ಕಾರದ ಪರವಾಗಿ ಬಿ.ಎನ್.ಜಗದೀಶ ವಾದಿಸಿದರು. ಹಂತಕ ಫಯಾಜ್ ಪರ ಜೆಡ್.ಎಂ.ಹತ್ತರಕಿ ವಾದಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನಯ್ಯ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಇಲ್ಲಿಯ 1ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಮತ್ತು 3ನೇ ಜೆಎಂಎಫ್ಸಿ ಕೋರ್ಟ್ಗೆ 483 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: ಅವಜೀಕರ ಮಠದ ಆವರಣದಲ್ಲಿ ಮಹಿಳೆ ಕೊಲೆ ಪ್ರಕರಣ; ಎಸ್ಪಿ ಮಹತ್ವದ ಮಾಹಿತಿ