ಚಿಕ್ಕಬಳ್ಳಾಪುರ: ಬೆಲೆ ದಿಢೀರ್ ಕುಸಿದು ಬೇಸರಗೊಂಡ ರೈತರೊಬ್ಬರು ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಿದ್ದ ಟೊಮೆಟೋವನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ತೀಮಾಕಲಪಲ್ಲಿ ಗ್ರಾಮದ ರೈತ ಶ್ರೀನಿವಾಸ್ ಅವರು ತಮ್ಮ 1.5 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದರು. ಕಳೆದ ಹದಿನೈದು ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಾಕ್ಸ್ ಒಂದಕ್ಕೆ 200ರಿಂದ 300 ರೂ. ಮಾರಾಟ ಮಾಡಿದ್ದರು. ಆದರೆ ಈಗ ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಒಂದು ಬಾಕ್ಸ್ ಬೆಲೆ ಕೇವಲ 30ರಿಂದ 50 ರೂಪಾಯಿ ಕೇಳಿದ್ದಾರೆ.
ಇದರಿಂದ ಬೇಸತ್ತ ರೈತ ಟೊಮೆಟೋ ವಾಪಸ್ ತಂದು ಜಾನುವಾರುಗಳು ತಿನ್ನಲಿ ಎಂದು ತನ್ನ ಜಮೀನಿನ ಬಳಿಯೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುರಿದ್ದಾರೆ.
ಟೊಮೆಟೋ ಹಣ್ಣು ಬಿಡಿಸಲು ಹೆಣ್ಣು ಮಕ್ಕಳಿಗೆ 200 ರೂ. ಹಾಗೂ ಗಂಡು ಕೂಲಿಗಳಿಗೆ 500 ರೂ. ಕೂಲಿ ನೀಡಬೇಕು. ಇದರ ಜೊತೆಗೆ ವಾಹನ ಬಾಡಿಗೆಯನ್ನೂ ಕೊಡಬೇಕು. ಸಿಗುವ ಇಷ್ಟು ಬೆಲೆಯಲ್ಲಿ ಇವನ್ನೆಲ್ಲಾ ಹೇಗೆ ನಿಬಾಯಿಸಬೇಕು ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ನೋಡಿ: ಶಿವಮೊಗ್ಗ: ಸೋನಮ್ ವಾಂಗ್ಚುಕ್ ಹೋರಾಟ ಬೆಂಬಲಿಸಿ ಪ್ರಗತಿಪರರ ಪ್ರತಿಭಟನೆ