ಕಾರವಾರ(ಉತ್ತರ ಕನ್ನಡ): ಅಂಕೋಲಾ ತಾಲೂಕಿನ ಮಾರುಗದ್ದೆ ಗ್ರಾಮದ ನಿವಾಸಿ ಗಣಪ ರಾಮಗೌಡ ಎಂಬವರ ಮನೆಯಲ್ಲಿ ಸುಮಾರು 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷಗೊಂಡು, ಮನೆಯವರಲ್ಲಿ ತೀವ್ರ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಮನೆಯ ಆವರಣದಲ್ಲಿದ್ದ ಕಟ್ಟಿಗೆಯ ರಾಶಿಯಲ್ಲಿ ಬೃಹತ್ ಗಾತ್ರದ ಹಾವಿರುವುದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಗಾಬರಿಗೊಂಡು, ಅವರ್ಸಾದ ಪ್ರಸಿದ್ಧ ಉರಗ ಪ್ರೇಮಿ ಮಹೇಶ್ ನಾಯಕ್ ಅವರಿಗೆ ಫೋನ್ ಮೂಲಕ ವಿಷಯ ಮುಟ್ಟಿಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಮಹೇಶ್ ನಾಯಕ್ ಹಾಗೂ ಅವರ ಪುತ್ರ ಗಗನ್ ನಾಯ್ಕ್ ಅವರು ಸತತ ಯತ್ನ ನಡೆಸಿ, ಕಟ್ಟಿಗೆಯ ರಾಶಿಯಲ್ಲಿ ಅಡಗಿಕುಳಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಜಾಗರೂಕತೆಯಿಂದ ಹೊರತೆಗೆದು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾದರು. ನಂತರ, ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಹಿಡಿದ ಹಾವನ್ನು ಸುರಕ್ಷಿತವಾಗಿ ಸಮೀಪದ ದಟ್ಟ ಅಭಯಾರಣ್ಯಕ್ಕೆ ಕೊಂಡೊಯ್ದು ಬಿಡಲಾಯಿತು.
ಹಾವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಹರಿಶ್ಚಂದ್ರ ನಾಯ್ಕ್, ಅಭಿಷೇಕ್ ಶೆಟ್ಟಿ, ತುಳಸಿದಾಸ್ ನಾಯ್ಕ್ ಹಾಗೂ ಗಣಪ ರಾಮಗೌಡ ಅವರ ಕುಟುಂಬದವರು ಸಾಥ್ ನೀಡಿದರು. ಬೃಹತ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಮಹೇಶ್ ನಾಯಕ್ ಮತ್ತು ಅವರ ತಂಡದ ಸಮಯಪ್ರಜ್ಞೆ ಹಾಗೂ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವುಗಳನ್ನೂ ಓದಿ: