Surprise Me!

ಬೆಳ್ತಂಗಡಿ: ಕಪಿಲಾ ನದಿ ಮಧ್ಯೆ ಸಿಲುಕಿದ ವೃದ್ಧನ ರಕ್ಷಣೆ

2026-07-29 12 Dailymotion

ಬೆಳ್ತಂಗಡಿ: ಕಪಿಲಾ ನದಿ ಮಧ್ಯೆ ಪ್ರಾಣ ಭಯದಲ್ಲಿ ಸಿಲುಕಿದ್ದ ವೃದ್ಧ ವ್ಯಕ್ತಿಯನ್ನು ಮಂಗಳವಾರ ಬೆಳ್ತಂಗಡಿಯ ಶಿಶಿಲ ಸಮೀಪ ರಕ್ಷಿಸಲಾಯಿತು. 

ಮಧ್ಯಾಹ್ನ ಶಿಶಿಲ ಗ್ರಾಮದ ಬದಿಗುಡ್ಡೆ ಎಂಬಲ್ಲಿ ನದಿ ಮಧ್ಯೆ ವ್ಯಕ್ತಿಯೋರ್ವರು ನಿಂತಿರುವುದನ್ನು ಯುವಕರು ಗಮನಿಸಿದ್ದಾರೆ. ಧಾರಾಕಾರ ಮಳೆ ಸುರಿಯುತ್ತಿದ್ದ ಕಾರಣ ಸಂಭಾವ್ಯ ಅಪಾಯವನ್ನರಿತು ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ವಯಂಸೇವಕರಾದ ರಾಧಾಕೃಷ್ಣ ಗುತ್ತು ಹಾಗೂ ರಮೇಶ ಬೈರಕಟ್ಟ ಅವರು ಸ್ಥಳೀಯ ಪರಿಣತ ಈಜುಗಾರ ಮೋಹನ ಗೌಡ ಬದ್ರಿಜಾಲು ಅವರೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. 

ಶಿಶಿಲೇಶ್ವರ ದೇಗುಲದ ಕಿಂಡಿ ಅಣೆಕಟ್ಟೆಯಿಂದ ಸುಮಾರು 900 ಮೀಟರ್ ಕೆಳಗೆ ನೆರೆ ನೀರು ರಭಸವಾಗಿ ಹರಿಯುತ್ತಿತ್ತು. ಕಪಿಲೆಯ ಎರಡು ಕವಲುಗಳ ಮಧ್ಯೆ ಅಂದಾಜು 70ರ ಆಸುಪಾಸಿನ ವೃದ್ದರೋರ್ವರು ಅಸಹಾಯಕರಾಗಿ ನಿಂತಿರುವುದನ್ನು ಅವರು ಗಮನಿಸಿದ್ದಾರೆ. ವೃದ್ಧನಿಗೆ ಧೈರ್ಯ ತುಂಬಿ ಜೀವರಕ್ಷಕ ಜಾಕೆಟ್ ತೊಡಿಸಿ ಜೀವರಕ್ಷಕ ಹಗ್ಗದ ನೆರವಿನಿಂದ ಸುರಕ್ಷಿತವಾಗಿ ದಡ ತಲುಪಿಸಿದ್ದಾರೆ.

ಈ ವಿಪತ್ತು ನಿರ್ವಹಣಾ ಸದಸ್ಯರಿಗೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಅಡ್ಯನಡ್ಕದ ವಾರಣಾಶಿ ಫಾರ್ಮ್ ಕೊಳದಲ್ಲಿ ಅಂತಾರಾಷ್ಟ್ರೀಯ ಮುಳುಗುತಜ್ಞ ನೆದರ್ಲೆಂಡ್ಸ್​ನ ಜೆರೋಮ್ ಅವರಿಂದ ಈಜು ಹಾಗೂ ಆಳ ಮುಳುಗುವಿಕೆ ತರಬೇತಿ ನೀಡಲಾಗಿತ್ತು.

ರಕ್ಷಣಾ ಕಾರ್ಯಾಚರಣೆಯಲ್ಲಿ ಉಮೇಶ್ ಕುಕ್ಕೆ ರೂಪೇಶ್ ಬೈಪಾಡಿ, ದಿನೇಶ್ ಬದಿಗುಡ್ಡೆ ಹಾಗೂ ಇನ್ನಿತರರು ಸಹಕರಿಸಿದ್ದಾರೆ.

ಇದನ್ನೂ ಓದಿ: ಅಪಘಾತಕ್ಕೀಡಾದ ಕಾರಿನಲ್ಲಿ ಸಿಲುಕಿದ್ದವರ ರಕ್ಷಣೆ: ವಿಟ್ಲ ಪೊಲೀಸರ ಸಮಯಪ್ರಜ್ಞೆಗೆ ಮೆಚ್ಚುಗೆ, ವಿಡಿಯೋ ವೈರಲ್