ರಾಯಚೂರಿನ ಬಿಚ್ಚಾಲಿ ಕ್ಯಾಂಪ್ನಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಚರ್ಚ್ ನಿರ್ಮಾಣ ವಿಚಾರವಾಗಿ ಎರಡು ಸಮುದಾಯಗಳ ನಡುವೆ ತೀವ್ರ ವಿವಾದ ಉಂಟಾಗಿದೆ. ಸರ್ಕಾರಿ ಜಾಗದಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಿ ಅನ್ನಸಂತರ್ಪಣೆ ನಡೆಸಲಾಗಿತ್ತು. ಅದೇ ಜಾಗದಲ್ಲಿ ಚರ್ಚ್ ನಿರ್ಮಾಣವೂ ಆಗಿರುವುದು ಉದ್ವಿಗ್ನತೆಗೆ ಕಾರಣವಾಗಿದೆ. ಪರಿಸ್ಥಿತಿ ಹದಗೆಡದಂತೆ ಬಿಚ್ಚಾಲಿ ಕ್ಯಾಂಪ್ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾಯಚೂರು ತಹಸೀಲ್ದಾರ್ ವ್ಯಾಪ್ತಿಗೆ ಸೇರಿದ ಸುಮಾರು 8 ಎಕರೆ 39 ಗುಂಟೆ ಜಾಗ ವಿವಾದದ ಕೇಂದ್ರವಾಗಿ ಮಾರ್ಪಟ್ಟಿದೆ. ಸಂತ್ರಸ್ತರಿಗಾಗಿ ನಿರ್ಮಿಸಿದ ಸರ್ಕಾರಿ ಜಾಗದಲ್ಲಿ ಅನುದಾನದಡಿ ಚರ್ಚ್ ನಿರ್ಮಾಣ ಮಾಡಿರುವುದು ಮತ್ತು ಆಂಜನೇಯ ಮೂರ್ತಿ ತೆರವಿಗೆ ಮುಂದಾದ ಘಟನೆ ಎರಡು ಸಮುದಾಯಗಳ ನಡುವೆ ವಾಗ್ವಾದ ಮತ್ತು ಮಾರಾಮಾರಿಗೆ ಕಾರಣವಾಗಿದೆ.