ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಕಾವೇರಿ ಕಿಚ್ಚು ಮತ್ತೆ ಜೋರಾಗಿದೆ. ತಮಿಳುನಾಡಿಗೆ ನೀರು ಬಿಟ್ಟಿರೋದನ್ನು ಖಂಡಿಸಿ ಬೆಂಗಳೂರು ಮೈಸೂರು ಹೆದ್ದಾರಿ ತಡೆದು ರೈತರು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ನಿನ್ನೆಯ ಹೋರಾಟಕ್ಕೆ ವಾಟಾಳ್ ನಾಗರಾಜ್ ನೇತೃತ್ವ ವಹಿಸಿದ್ದರು.
ಮಂಡ್ಯದ ಸಂಜಯ ವೃತ್ತದಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು ಮೈಸೂರು ಹಳೇ ಹೆದ್ದಾರಿಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು ನಮಗೆ ಬೊಗಸೆ ನೀರು ಎಂದು ವಿಭಿನ್ನ ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ರಾಜ್ಯ ರೈತರ ಹಿತ ಕಾಯಬೇಕು, ಕಟ್ಟು ಪದ್ದತಿ ನೀರನ್ನು ರದ್ದು ಮಾಡಿ ರೈತರಿಗೆ ಖಾಯಂ ನೀರು ಕೊಡಿ ಎಂದು ಆಗ್ರಹಿಸಿದರು.
ವಾಟಾಳ್ ನಾಗರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ," ಆ.26ಕ್ಕೆ KRSಗೆ ಮುತ್ತಿಗೆ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಮಂಡ್ಯದಿಂದ ದೆಹಲಿವರೆಗೂ ನಮ್ಮ ಹೋರಾಟ ಸದ್ದು ಮಾಡಬೇಕು. ಸರ್ಕಾರ ಕೂಡಲೇ ರಾಜೀನಾಮೆ ಕೊಡಬೇಕು. ರೈತ, ಕನ್ನಡ ಸಂಘಟನೆಗಳನ್ನು ಡಿಕೆಶಿ ಹೊಡೆದು ಹಾಕುತ್ತಿದ್ದಾರೆ. ಯಾರಿಗೂ ಹೆದರಲ್ಲ, ತಮಿಳುನಾಡಿಗೆ ನೀರು ಬಿಡುತ್ತಾರೆ. ಸರ್ಕಾರದ ವಿರುದ್ಧ ಸತ್ಯಾಗ್ರಹ ಮಾಡುತ್ತೇವೆ. ನಮ್ಮ ನಾಲೆಗಳಿಗೆ ನೀರಿಲ್ಲ, ಮಂಡ್ಯದ ಸಾವಿರಾರು ಕೆರೆ ಮುಚ್ಚಿವೆ. ಕೆರೆ ಕಟ್ಟೆಗಳಿಗೆ ನೀರು ಬಿಟ್ಟಿಲ್ಲ. ರಾಹುಲ್ ಗಾಂಧಿಯವರು ತಮಿಳುನಾಡಿನ ವಿಜಯ್ ಸ್ನೇಹ ಮಾಡಿದರು. ನಮ್ಮ ಸಿಎಂಗೂ ವಿಜಯ್ ಜೊತೆ ಸ್ನೇಹ ಆಯ್ತು. ಇವರ ಸ್ನೇಹಕ್ಕೆ ನಮ್ಮನ್ನು ಬಲಿ ಕೊಟ್ಟಿದ್ದಾರೆ. ಗೌರವ ಹಾಗೂ ಪ್ರಜಾಪ್ರಭುತ್ವ ಮೇಲೆ ಗೌರವ ಇದ್ದರೆ ಕೂಡಲೇ ಸಿಎಂ ರಾಜೀನಾಮೆ ಕೊಡಬೇಕು" ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ: ಕಾವೇರಿ ಕೊಳ್ಳದ ರೈತರಿಗೆ ಕೇವಲ 4 ಕಟ್ಟು ನೀರು; ಅರೆ ಖುಷ್ಕಿ ಬೆಳೆಗಳಿಗೆ ಮಾತ್ರ ಅವಕಾಶ