ದಾವಣಗೆರೆ: ಮುಂಗಾರು ಪ್ರವೇಶ ಮಾಡಿ ಒಂದು ತಿಂಗಳು ಕಳೆಯುತ್ತಾ ಬಂದ್ರೂ ಮಳೆ ಮಾತ್ರ ಜಿಲ್ಲೆಯಲ್ಲಿ ಕೃಪೆ ತೋರಿಲ್ಲ. ಈ ಬಾರಿ ಜೂನ್ ಅಂತ್ಯವಾದರೂ ಮಳೆ ಬಾರದೆ, ಮುಂಗಾರು ಕೈ ಕೊಟ್ಟಿದೆ. ರೈತ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ಪೈರು ನೆಲಕಚ್ಚಿದೆ. ಮತ್ತಷ್ಟು ರೈತರು ಬಿತ್ತನೆ ಮಾಡಲು ಮಳೆ ರಾಯನಿಗಾಗಿ ಕಾಯುತ್ತಿರುವಾಗ, ಇನ್ನೊಂದಿಷ್ಟು ರೈತರು ವರುಣ ದೇವನನ್ನು ಒಲಿಸಿಕೊಳ್ಳಲು ಕಪ್ಪೆಗಳಿಗೆ ಮದುವೆ ಮಾಡಿಸಿದ್ದಾರೆ.
ಮಾಯಕೊಂಡ ಸಮೀಪದ ಹಿಂಡಿಸಕಟ್ಟೆ ಗ್ರಾಮದ ಗ್ರಾಮಸ್ಥರು ಕಪ್ಪೆಗಳಿಗೆ ಮದುವೆ ಮಾಡುವ ಮೂಲಕ ವರುಣ ದೇವನಲ್ಲಿ ಪ್ರಾರ್ಥಿಸಿದ್ದಾರೆ. ಕಪ್ಪೆಗಳು ಮಳೆರಾಯನ ಮಿತ್ರ, ಅವುಗಳ ಮದುವೆ ಮಾಡಿಸಿದರೆ ಮಳೆರಾಯ ಕೃಪೆ ತೋರುತ್ತಾನೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ಅದೇ ಕಾರಣಕ್ಕೆ ಹೆಣ್ಣು ಮತ್ತು ಗಂಡು ಕಪ್ಪೆಗಳನ್ನ ತಂದು ಅವುಗಳಿಗೆ ಮದುವೆ ಮಾಡಿಸಿದ್ದಾರೆ.
ಗ್ರಾಮದ ಹಿರಿಯರು ಕಪ್ಪೆಗಳಿಗೆ ಅರಿಶಿಣ, ಕುಂಕುಮ ಇಟ್ಟು, ಹೂವಿನ ಹಾರಗಳನ್ನ ಹಾಕಿ, ವಧು ವರರಂತೆ ಅಲಂಕಾರ ಮಾಡಿ ತಾಳಿಕಟ್ಟಿ ಮದುವೆ ಮಾಡಿಸಿದ್ದಾರೆ. ನಂತರ ಅವುಗಳನ್ನು ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಕೆರೆಗೆ ಬಿಟ್ಟಿದ್ದಾರೆ. ಈ ವೇಳೆ ಕಪ್ಪೆಗಳು ಕೂಗಿದರೆ ಮಳೆಯಾಗುತ್ತದೆ ಎಂಬುದು ಸ್ಥಳೀಯರ ನಂಬಿಕೆ. ಮಳೆಯಾಗದಿರುವ ಹಲವು ಸಂದರ್ಭಗಳಲ್ಲಿ ಕಪ್ಪೆಗಳ ಮದುವೆ ಮಾಡಿಸಿದಾಗ ಮಳೆಯಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇದನ್ನೂ ಓದಿ : ಹನಿ ನೀರಿಗಾಗಿ ಗ್ರಾಮಗಳಲ್ಲಿ ನಿತ್ಯ ಪರದಾಟ; ದೇವರಿಗೆ ಪರುವು, ದುಗ್ಗಮ್ಮ ದೇವಿಗೆ ಎಡೆ ಇಟ್ಟು, ಮಳೆಗಾಗಿ ಕತ್ತೆ ಮದುವೆ ಮಾಡಿದ ಜನ