Surprise Me!

ರಾಮನಗರ: ಕಬ್ಬಿಣದ ಕಂಬಗಳ ನಡುವೆ ಸಿಲುಕಿದ ಕಾಡಾನೆ; ನಿರಂತರ ಪ್ರಯತ್ನದಿಂದ ಆನೆಯ ರಕ್ಷಣೆ

2026-07-01 7 Dailymotion

ರಾಮನಗರ: ಕಾಡಿನಿಂದ ಆಹಾರ ಅರೆಸಿ ನಾಡಿಗೆ ಬರಲು ಯತ್ನಿಸಿದ ಕಾಡಾನೆಯೊಂದು ರೈಲ್ವೆ ಹಳಿಗಳ ಬ್ಯಾರಿಕೇಡ್ ಕಬ್ಬಿಣದ ಕಂಬಗಳ ನಡುವೆ ಸಿಲುಕಿ ತೀವ್ರವಾಗಿ ಕಷ್ಟಪಟ್ಟ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಅರೆಕೊಪ್ಪ ಗ್ರಾಮದ ಬಳಿ ಜರುಗಿದೆ.

ಕನಕಪುರ ತಾಲೂಕಿನ ಅರೆಕೊಪ್ಪ ಗ್ರಾಮವು ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯದ ಕಾಡಂಚಿನಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ನೀರನ್ನು ಹುಡುಕುತ್ತಾ ವನ್ಯಜೀವಿಗಳು ನಾಡಿಗೆ ಬರುವುದು ಸಾಮಾನ್ಯವಾಗಿದೆ. ಅದೇ ರೀತಿ, ಮುಗ್ಗೂರು ಅರಣ್ಯ ಪ್ರದೇಶದಿಂದ ಹೊರಬರಲು ಯತ್ನಿಸಿದ ಕಾಡಾನೆಯೊಂದು ಆನೆಗಳು ನಾಡಿಗೆ ಬರದಂತೆ ತಡೆಯಲು ನಿರ್ಮಿಸಲಾಗಿದ್ದ ರೈಲ್ವೆ ಬ್ಯಾರಿಕೇಡ್‌ನ ಕಬ್ಬಿಣದ ಕಂಬಗಳ ಮಧ್ಯೆ ಸಿಲುಕಿಕೊಂಡಿದೆ. ಕಂಬದಿಂದ ಹೊರಕ್ಕೆ ಬರಲು ಆನೆಗೆ ಆಗಿಲ್ಲ. ಸುಮಾರು ಹೊತ್ತಿನಿಂದ ಪ್ರಯತ್ನಿಸಿದ ಆನೆಗೆ ಸುಸ್ತಾಗಿ, ಅಲ್ಲೇ ಕೆಳಗೆ ಕುಳಿತುಕೊಂಡಿದೆ.

ಕಬ್ಬಿಣದ ಕಂಬಗಳ ನಡುವೆ ದೇಹ ಸಿಲುಕಿಕೊಂಡಿದ್ದರಿಂದ ಆನೆಗೆ ಮುಂದೆ ಹೋಗಲು ಅಥವಾ ಹಿಂದೆ ಬರಲು ಸಾಧ್ಯವಾಗದೇ ತೀವ್ರವಾಗಿ ನರಳಾಡಿದೆ. ಆನೆಯ ಕಿರುಚಾಟವನ್ನು ಕೇಳಿ ಸ್ಥಳೀಯ ಗ್ರಾಮಸ್ಥರು ಧಾವಿಸಿದ್ದು, ತಕ್ಷಣವೇ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆನೆಯಲ್ಲಿ ಬ್ಯಾರಿಕೇಡ್‌ನಿಂದ ಹೊರಕ್ಕೆ ತೆಗೆಯುವ ಯತ್ನ ನಡೆಯಿತು. ಸತತ ಎರಡು ಗಂಟೆಗಳ ನಿರಂತರ ಪ್ರಯತ್ನದಿಂದ ಆನೆಯನ್ನು ಬ್ಯಾರಿಕೇಡ್​ನಿಂದ ಹೊರ ತರುವಲ್ಲಿ ಅರಣ್ಯಾಧಿಕಾರಿಗಳು ಯಶ ಕಂಡಿದ್ದಾರೆ.

"ಕಬ್ಬಿಣದ ಸರಳಿನ ಮಧ್ಯೆ ಸಿಲುಕಿಕೊಂಡಿದ್ದ ಕಾಡಾನೆ ಬಿಡಿಸಿಕೊಳ್ಳುವ ಯತ್ನದಲ್ಲಿ ಸಂಪೂರ್ಣ ಸುಸ್ತಾಗಿ ಹೋಗಿತ್ತು. ಸುಸ್ತಾಗಿದ್ದ ಆನೆಗೆ ಅರಣ್ಯ ಸಿಬ್ಬಂದಿಗಳು ಆಹಾರ ನೀಡಿದರು. ನಂತರ ಕಾರ್ಯಾಚರಣೆ ನಡೆಸಿ ಆನೆಯನ್ನು ಕಬ್ಬಿಣದ ರಾಡಿನಿಂದ ಬಿಡಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆಂದು" ಸ್ಥಳೀಯರಾದ ಮಹೇಶ್ ತಿಳಿಸಿದರು.

ಇದನ್ನೂ ಓದಿ: ಮುನಿಸಿಕೊಂಡ ವರುಣ: ಧಾರವಾಡದಲ್ಲಿ ಮಳೆಗಾಗಿ ಕತ್ತೆ, ಕಪ್ಪೆ ಮದುವೆ ಮಾಡಿದ ಗ್ರಾಮಸ್ಥರು